ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday 24 September 2012

ಹೇಳ್ಕೊಳ್ಳಕ್ ಒಂದ್ ಊರು / Helkollak ondooru

ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನನ್ ಪರ್ಪಂಚ

ಏನೋ ಖುಸಿಯಾದಾಗ
ಮತ್ ಹೆಚ್ಚಿ ಹೋದಾಗ
ಹಂಗೇನೆ ಪ್ರಪಂಚದಂಚ
ದಾಟ್ಕಂಡಿ ಹಾರಾಡ್ತಾ
ಕನ್ನಡದಲ್ ಪದವಾಡ್ತಾ
ಹಿಗ್ಗೋದು ರತ್ನನ್ ಪರ್ಪಂಚ

ಹಗಲೆಲ್ಲ ಬೆವರ್ ಹರಿಸಿ
ತಂದಿದ್ದ್ರಲ್ಲಿ ಒಸಿ ಮುರಿಸಿ
ಸಂಜೆಲಿ ಹುಳಿ ಹೆಂಡ ಕೊಂಚ
ಹೀರ್ತ ಮೈ ಝುಂ ಅಂದ್ರೆ
ವಾಸನೆ ಘಂ ಘಂ ಅಂದ್ರೆ
ತುಂಬ್ ಹೋಯ್ತು ರತ್ನನ್ ಪರ್ಪಂಚ

ದುಕ್ ಇಲ್ಲ ದಾಲ್ ಇಲ್ಲ
ನಮಗದ್ರಾಗ್ ಪಾಲಿಲ್ಲ
ನಾವ್ ಕಂಡಿದ್ದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ
ಬಾಳೋದು ರತ್ನನ್ ಪರ್ಪಂಚ

ಬಡತನ ಗಿಡತನ ಏನಿದ್ರೇನು
ನಡತೇನ ಚೆನ್ನಾಗಿಟ್ಕೋಳೋದೆ ಅಚ್ಛಾ
ಅಂದ್ಕೊಂಡಿ ಸುಖವಾಗಿ
ಕಷ್ಟಕ್ಕೆ ನಗುಮುಖವಾಗಿ
ನಡೆಯೋದೇ ರತ್ನನ್ ಪರ್ಪಂಚ

ದೇವ್ರೇನ್ರ  ಕೊಡಲಣ್ಣ, ಕೊಡ್ದಿದ್ದ್ರೆ ಬುಡಲಣ್ಣ
ನಾವೆಲ್ಲ ಅವನೀಗೆ ಬಚ್ಚಾ
ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ
ಕುಣೀಯಾದೆ ರತ್ನನ್ ಪರ್ಪಂಚ

                                                                            - ಜಿ. ಪಿ. ರಾಜರತ್ನಂ 

Sunday 23 September 2012

ಹಾಡು ಹಳೆಯದಾದರೇನು / Haadu haleyadaadarenu

ಹಾಡು...ಹಾಡು ...ಹಾಡು ಹಳೆಯದಾದರೇನು ಭಾವ ನವನವೀನ..
ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ....

ಹಳೆಯ ಹಾಡು ಹಾಡು ಮತ್ತೆ ಅದನೆ ಕೇಳಿ ತಣಿಯುವೆ
ಹಳೆಯ ಹಾಡಿನಿಂದ ಹೊಸತು ಜೀವನಾ ಕಟ್ಟುವೆ.....

ಹಮ್ಮು ಬಿಮ್ಮು ಒಂದೂ ಇಲ್ಲ ಹಾಡು ಹೃದಯ ತೆರೆದಿದೆ
ಹಾಡಿನಲ್ಲಿ ಲೀನವಾಗಲೆನ್ನ ಮನವು ಕಾದಿದೆ......

                                                                                - ಜಿ.ಎಸ್.ಶಿವರುದ್ರಪ್ಪ

ಕುರುಬರೋ ನಾವು ಕುರುಬರು / Kurubaro naavu kurubaru

ಕುರುಬರೋ ನಾವು ಕುರುಬರು
ಏನು ಬಲ್ಲೇವರಿ ಒಳ ಕಾರುಬಾರು

ನೂರಾರು ಸೊಕ್ಕಿದ ಕುರಿ ಮೇಯಿಸಿಕೊಂಡು
ಸೆಳೆದಂತೆ ಬಂದೇವು ನಮ್ಮ ಕುರಿ ಹಿಂಡು || ಕುರುಬರೋ ||

ಏಳುಸುತ್ತಿನ ಬೇಲಿ ಗುಟ್ಟಾಗಿ ಹಚ್ಚಿ
ಇಟ್ಟವ್ರೆ ಕುರಿಗಳ ಚೆನ್ನಾಗಿ ಬಚ್ಚಿ
ಹೊಟ್ಟೆ೦ಬ ಬಾಗಿಲ ಬಲವಾಗಿ ಮುಚ್ಚಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ || ಕುರುಬರೋ ||

ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ
ತುಂಬಿ ಚಲ್ಲೇವರಿ ಹಿಕ್ಕಿಯ ಹೆಡಗಿ
ಗುರು ಹೇಳಿದ ಬಾಳು ಹಾಲಿನ ಗಡಗಿ
ನಮ್ಮ ಕೈಲೇ ಇದ್ಯೋ ಅರಿವಿನ ಬಡಗಿ || ಕುರುಬರೋ ||

ಮೇವು ಹುಲ್ಸಾದಂತ ಮಸಣಿದು ಖರೆಯೇ
ಕುರಿ ಇಲ್ಲಿ ಮೆಯ್ಸಾಕ ಬಂದದ್ದು ಸರಿಯೆ
ತೊಳ ಹಾರಿ ಕುರಿಗಳ ಗೋಣು ಮುರಿಯೆ
ನಾಗಲಿಂಗ ಅಜ್ಜ ಹೇಳಿದ ಪರಿಯೇ || ಕುರುಬರೋ ||

                                                                               - ಶಿಶುನಾಳ ಶರೀಫ

Saturday 22 September 2012

ನಾ ಚಿಕ್ಕವನಾಗಿದ್ದಾಗ / Naa chikkavanaagiddaaga

ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು
ಈ ನಿಂಬೆಯ ಗಿಡದಿಂದೊಂದು ಒಳ್ಳೆಯ ಪಾಠವ ಕಲಿ ಮಗು
ನೀ ಪ್ರೇಮದಲ್ಲಿ ಎಂದೂ ನಂಬಿಕೆ ಇಡಬೇಡಾ ಮರಿ
ಆ ಪ್ರೇಮವು ಸಹ ನಿಂಬೆಯ ಗಿಡದಂತೆಂಬುದ ನೀ ತಿಳಿ

ನಿಂಬೆ ಗಿಡ ತುಂಬ ಚಂದ
ನಿಂಬೆಯ ಹೂವು ತುಂಬ ಸಿಹಿ
ಆದರೆ ನಿಂಬೆಯ ಹಣ್ಣು ಕಂದ
ತಿನ್ನಲು ಬಹಳ ಹುಳೀ ಕಹಿ

ಯೌವ್ವನದಲ್ಲಿ ನಾನು ಒಂದು ಹುಡುಗಿಯ ಪ್ರೇಮಿಸಿದೆ
ಆ ಹುಡುಗಿಯು ನನಗೆ ಊಡಿಸುತಿದ್ದಳು ದಿನವು ಪ್ರೇಮಸುಧೆ
ಸೂರ್ಯನತ್ತಲೆ ಸೂರ್ಯ ಕಾಂತಿ ಮೊಗವೆತ್ತಿ ತಿರುಗುವಂತೆ
ಆ ಹುಡುಗಿಯ ಮೋಹದಲ್ಲಿ ಅಪ್ಪನ ಮಾತ ನಾ ಮರೆತೆ.

ನಿಂಬೆಯ ಗಿಡದ ರೆಂಬೆ ರೆಂಬೆಯಲು ನೂರು ನೂರು ಮುಳ್ಳು
ಹುಡುಗಿಯ ಪ್ರೇಮದ ಮಾತುಗಳೆಲ್ಲ ಶುದ್ಧ ಕಪಟ ಸುಳ್ಳು
ಬೇರೊಬ್ಬನ ಕೊಬ್ಬಿಗೆ ಶಾಖವಾಗಿಹಳು ನನ್ನ ಹುಡುಗಿ ಇಂದು
ಅಪ್ಪನ ಕಿರುನಗೆ ರೇಗಿಸುತ್ತಿದೆ ಬುದ್ಧಿ ಬಂತೆ ಎಂದು.

                                                                                          - ಬಿ. ಆರ್. ಲಕ್ಷ್ಮಣರಾವ್

Download this song

ನಲವತ್ತೇಳರ ಸ್ವಾತಂತ್ರ್ಯ / Nalavattelara Svatantrya

ಯಾರಿಗೆ ಬಂತು? ಎಲ್ಲಿಗೆ ಬಂತು?
ನಲವತ್ತೇಳರ ಸ್ವಾತಂತ್ರ್ಯ
ಟಾಟಾ ಬಿರ್ಲಾ ಜೋಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು

ಕೋಟ್ಯಾಧೀಶನ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಬಡವನ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ

ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ಹಣವಂತರು ಕೈಸನ್ನೆ ಮಾಡಿದರೆ
ಕತ್ತಲೆಯಲ್ಲಿ ಬೆತ್ತಲೆಯಾಯಿತು
ಯಾರೂ ಕಾಣದ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
ಯಾರಿಗೆ ಬಂತು ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಪೋಲೀಸರ ಬೂಟಿಗೆ ಬಂತು
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ

ಪಾರ್ಲಿಮೆಂಟಿನ ಕುರ್ಚಿಯ ಮೇಲೆ
ವರ್ಷಗಟ್ಟಲೆ ಚರ್ಚೆಗೆ ಕೂತು
ಬಡವರ ಬೆವರು ರಕ್ತವ ಕುಡಿದು
ಏಳಲೇಇಲ್ಲ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ?

                                           - ಸಿದ್ಧಲಿಂಗಯ್ಯ

Tuesday 18 September 2012

ಬಂದಂತೆ ಮರು ವಸಂತ / Bandante maruvasanta

ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ.

ಕೈ ಸೋಕಿ, ನಿನ್ನ ಬಿಸಿ ತಾಕಿ,
ಚಿಮ್ಮಿದೆ ಹೊಸ ಚಿಗುರು;
ನಗೆಯಂತೆ, ನಿನ್ನ ಬಗೆಯಂತೆ
ಅರಳಿದೆ ಹೂವುಗಳು;
ನಿನ್ನ ಪ್ರೀತಿಯ ಪ್ರಖರತೆಗೆ
ಮಾಗಿಯ ಮಂಜು ತೆರೆ
ಕರಗಿ, ಸೊರಗಿ, ಮರೆಯಾಗಲು
ಜಗವೇ ಝಗಝಗಿಸಿದೆ.

ಕಂದಿದ್ದ ಕಣ್ಣಿಗೆ ಹೊಸ ಹೊಳಪು
ನೀ ತಂದೆ ಹೊಸ ನೋಟವ,
ಎಂದೆಂದೂ ಜೋಡಿ ನಾನೆಂದು
ನೀಡಿದೆ ಒಡನಾಟವ;
ನಿನ್ನ ಒಲವೆಂಬ ಸಂಜೀವಿನಿ
ಹೊಸ ಶಕ್ತಿ ತೋಳಿಗೆ,
ಧೃತಿಯ ತಂದಿಹುದು ಹೆಜ್ಜೆಗೆ,
ಭರವಸೆಯ ಬದುಕಿಗೆ.

                                                - ಬಿ. ಆರ್. ಲಕ್ಷ್ಮಣ ರಾವ್.

Sunday 16 September 2012

ಕೋಳಿಕೆ ರಂಗ... / Kolike Ranga


Constantinople

C O N S T A N T I N O P L E
C O N S T A N T I N O P L E
Use your pluck now try your luck to sing along with me,

Constantinople
C O N S T A N T I N O P L E
C O N S T A N T I N O P L E
It’s as easy to sing as you sing your A-B-C.

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕೋತ್ವ ಳಿ ಕಕೆತ್ವ ಮತ್ ಸೋನ್ನೆಯುನು
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕಕೊತ್ವ ಳಿ ಕಕೆತ್ವ ಮತ್ ಸೋನ್ನೆಯುನು
ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ

ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ,
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ;
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ. 

ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಂಹಳ್ಳಿ ಕಿಲಾಡಿ ಹುಂಜಾ!

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕೋತ್ವ ಳಿ ಕಕೆತ್ವ ಮತ್ ಸೋನ್ನೆಯುನು
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ

ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.

ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ,
ಕೇಳ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿಲೇ, ಯಾರೋ ಯಾಕೋ ಇಲ್ಲಿಅಂತ!
ಹಃ ನಾನು..

ನಾನು ಕೋಳಿಕೆ ರಂಗ
ಕೋನುಳಿನುಕೆನುನು ಸೊನ್ನೆ
ಕಕೊತ್ವ ಳಿ ಕಕೆತ್ವ ಮತ್ ಸೋನ್ನೆಯುನು
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು
ಬೆಪ್ ನನ್ ಮಗ.


                                                                                               - ಟಿ. ಪಿ. ಕೈಲಾಸಂ

Download this song

Friday 14 September 2012

ಅಂಥಿಂಥ ಹೆಣ್ಣು ನೀನಲ್ಲ / Anthintha hennu neenalla

ಅಂಥಿಂಥ ಹೆಣ್ಣು ನೀನಲ್ಲ;
ನಿನ್ನಂಥ ಹೆಣ್ಣು ಇನ್ನಿಲ್ಲ.

ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!

ಮಣಿಮಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.

ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!

ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.

ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮೆಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.

ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.

ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.

                                                    - ಕೆ. ಎಸ್. ನರಸಿಂಹಸ್ವಾಮಿ

Tuesday 11 September 2012

ಬಾರಿಸು ಕನ್ನಡ ಡಿಂಡಿಮವ / Baarisu kannada dindimava

ಗೀತಗುಚ್ಛದ 150ನೇ ಪುಷ್ಪ...


ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.

                                                                  - ಕುವೆಂಪು

Monday 10 September 2012

ಮರೆತೇನೆಂದಾರ ಮರೆಯಲಿ ಹ್ಯಾಂಗ / Maretenendara mareyali hyaanga

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ-ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಪಂಚಭೂತದಾಗ ವಂಚನೆ ಕಂಡಿ
ಕಣ್ಣಿನಂಚಿನಾಗ ಹೊಸ ಜಗ ಕಂಡಿ
ಸೊನ್ನಿಗೆ ಆಕಾರ ಬರೆದೇನೆಂದಿ
ಬೇಲಿಗೆ ಗೋಡೆ ಕಟ್ಟುತೀನೆಂದಿ
ಸಚರಾಚರಗಳ ರಚನೆ ಮಾಡೋದಕ್ಕ
ಬೇರೊಬ್ಬ ಸೂರ್ಯನ ತರತೇನೆಂದ್ಯೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಕಣ್ಣೀರಿನ ಹೊಳಿಗಡ್ಡ ಕಟ್ಟಿದಿ
ಹರಿವ ನೆತ್ತರಕ ಒಡ್ಡ ಕಟ್ಟಿದಿ
ಮಡುವಿನ ನಡುವ ಕಾಲನೂರಿಕೊಂಡ
ಬತ್ತಿಯಾಗಿ ತಲಿ ಹೊತ್ತಿಸಿಕೊಂಡೆ
ಮನುಷ್ಯರ ಮುರಿದಿ ತೇರ ಕಟ್ಟಿದಿ
ಹತ್ತವತಾರದ ಕುದುರೆಯ ಜೋಡಿ...ಹಾ
ಹತ್ತಕುದಿರಿಯ ಹಳದಿ ದೇವರು
ಸ್ವಯಂ ಸೂರ್ಯ ನಾ ಬಂದೇನೆಂದ್ಯೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಬೆಂಕಿ ಹಚ್ಚಿದಿ ಬೇಲ್ಯಾಗ ನಿಂದಿ
ಸಿದ್ಧಸಿದ್ಧರ ಕುದ್ಧ ಒಗೆಸಿದಿ
ಹಂಗ ಬಿದ್ದ ಹಂಗಾಮರ ಬೆದಿಗಿ
ಕೈಯ ಬೀಸಿ ಕೈಲಾಸವ ಕರೆದಿ
ಹಳದಿ ಬಿತ್ತಿದಿ ಹಳದಿಯ ಬೆಳೆದಿ
ಮುಳ್ಳಬೇಲಿಗೂ ಹೂವಿನ ಹಳದಿ
ಬಣ್ಣದ ಹೆಸರಾ ಬದಲು ಮಾಡಿದ್ಯೋ
ಕಣ್ಣಿನ ಕಾಮಾಲೆ ತಿಳಿಯದೆ ಹೋದ್ಯೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

ಹರಕ ಹುಬ್ಬಿನ ತಿರುಕರ ಅರಸ
ಡೊಳ್ಳ ಹೊಟ್ಟೆಯ ಹಸಿದವರರಸ
ದಿನಾ ಹುಟ್ಟಿದಿ ದಿನಕೊಮ್ಮೆ ಸಾಯ್ತಿ
ಸುದ್ದಿಯ ಕಣ್ಣ ಒದ್ದಿ ಮಾಡಿದಿ
ಭೂಮಿನರ್ಧಕ ಸಾಯೋದ ಕಲಿಸಿ
ಸ್ವತಃ ಸಾಯಲಿಕಿ ಬಾರದೆ ಹೋದಿ
ಕಟ್ಟಿದ ಗೋಡೆಗೆ ಕಳಸ ಏರಿತು
ಬದುಕಿದ ಜೀವ ಕಥೆಯಾಗಿತ್ತೋ
ಬಟಾಬಯಲಿನಾಗ ಮಟಾಮಾಯವಾಗಿ
ಬೆಂಕಿ ಆರಿ ಆ ಬೆಂಕಿ ಆರಿ ಬರಿ ಬೆಳಕುಳಿದಿತ್ತೋ

ಮರೆತೇನೆಂದಾರ ಮರೆಯಲಿ ಹ್ಯಾಂಗ
ಮಾವೋ-ತ್ಸೆ.ತುಂಗ
ಮರೆತೇನೆಂದಾರ ಮರೆಯಲಿ ಹ್ಯಾಂಗ..ಹಾ

                                                                  -  ಡಾ. ಚಂದ್ರಶೇಖರ ಕಂಬಾರ

ನನಗೂನೆ ಯೆಂಡಕ್ಕು ಬಲ್ ಬಲೆ ದೋಸ್ತಿ / Nanagoone Yendakku balbale dosti

ನನಗೂನೆ ಯೆಂಡಕ್ಕು ಬಲ್ ಬಲೆ ದೋಸ್ತಿ.
ಕುಡದ್ ಬುಟ್ಟಾಗ್ ಆಡೋದು ನಂಗ್ ಪೂರ ಜಾಸ್ತಿ.
ನಂಗ್ ಎಸರು ಯೇಳ್ತಾರೆ - ರ್ರರ್ರರ್ರರ್ರತ್ನ.
ನಾನ್ ಆಡೋ ಪದಗೋಳು ಯೆಂಡದ್ ಪ್ರಯತ್ನ.

ಮಾಬಾರ್ತ ಬರೆಯಾಕೆ ಯಾಸಂಗ್ ಇನಾಯ್ಕ
ಸಿಕ್ದಂಗೆ ನಂಗ್ ಒಬ್ಬ ಬೇವಾರ್ಸಿನಾಯ್ಕ
ಸಿಕ್ಕೋನೆ, ನನ್ ಆಡ್ನ ಕೂಡಿಸ್ದ ಬರ್ದು!
ಏನ್ ಐತೊ ಯಾರ್ ಬಲ್ರು ಔಂಗ್ ಇರೊ ದರ್ದು!

'ಬರಕೊಂಡ್ರೆ ಬರಕೊಂಡ್ ಓಗ್, ನಿಂಗೂನೆ ಐಲು;
ಆದಸ್ಟೂ ಮಾಡಾನೆ ಸಾಯ ನಂಕೈಲು'
ಅಂದ್ಕಂಡ್ ಔನ್ ಬರದಿದ್ನ ಅಚ್ಗ್ ಆಕೋಕ್ ಒಪ್ಪಿ
ಕಳಿಸಿವ್ನಿ. ಬೈದೀರ ನನಗೇನ್ರ ತಪ್ಪಿ!

ಅಕ್ಸಾರ ಗಿಕ್ಸಾರ ನನಗೇನೂ ಬರ್‍ದು.
(ದೊಡ್ ಚಾಕ್ರಿ ಬೇಕಂದ್ರೆ ಓದೆ ಬೇಕು ದರ್ದು!)
ಪದಗೋಳು ಚಂದ್ ಇದ್ರೆ ಯೆಂಡಕ್ ಸಿಪಾರ್ಸಿ!
ಚಂದಾಗ್ ಇಲ್ದಿದ್ರನಕ ತಪ್ಗೆ ಬೇವಾರ್ಸಿ!

                                                                     - ಜಿ. ಪಿ. ರಾಜರತ್ನಂ

Sunday 9 September 2012

ಶ್ರಾವಣಾ ಬಂತು / Shraavana Bantu

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು.

ಕಡಲಿಗೆ ಬಂತು ಶ್ರಾವಣಾ| ಕುಣಿದ್ಹಾಂಗ ರಾವಣಾ|
ಕುಣಿದಾವ ಗಾಳಿ| ಭೈರವನ ರೂಪತಾಳಿ.

ಶ್ರಾವಣಾ ಬಂತು ಘಟ್ಟಕ್ಕ| ರಾಜ್ಯಪಟ್ಟಕ್ಕ|
ಬಾನ ಮಟ್ಟಕ್ಕ|
ಏರ್ಯಾವ ಮುಗಿಲು| ರವಿ ಕಾಣೆ ಹಾಡೇಹಗಲು|

ಶ್ರಾವಣಾ ಬಂತು ಹೊಳಿಗಳಿಗೆ| ಅದೆ ಶುಭಗಳಿಗೆ|
ಹೊಳಿಗೆ ಮತ್ತ ಮಳಿಗೆ|
ಆಗ್ಯೇದ ಲಗ್ನ| ಅದರಾಗ ಭೂಮಿ ಮಗ್ನ||

ಶ್ರಾವಣಾ ಬಂತು ಊರಿಗೆ| ಕೆರಿ ಕೇರಿಗೆ|
ಹೊಡೆದ ಝೂರಿಗೆ|
ಜೋಕಾಲಿ ಏರಿ| ಅಡರ್ಯಾವ ಮರಕ ಹಾರಿ|

ಶ್ರಾವಣಾ ಬಂತು ಮನಿಮನಿಗೆ| ಕೂಡಿ ದನಿದನಿಗೆ|
ಮನದ ನನಿಕೊನಿಕೊನಿಗೆ|
ಒಡೆದಾವ ಹಾಡೂ| ರಸ ಉಕ್ಕತಾವ ನೋಡು||
ಶ್ರಾವಣಾ ಬಂತು.

ಬೆಟ್ಟ ತೊಟ್ಟಾವ ಕುತನಿಯ ಅಂಗಿ|
ಹಸಿರು ನೋಡ ತಂಗಿ|
ಹೊರಟಾವೆಲ್ಲೊ ಜಂಗಿ|
ಜಾತ್ರಿಗೇನೋ| ನೆರೆದsದ ಇಲ್ಲೆ ತಾನೋ||

ಬನಬನ ನೋಡು ಈಗ ಹ್ಯಾಂಗ|
ಮದುವಿ ಮಗನ್ಹಾಂಗ
ತಲಿಗೆ ಬಾಸಿಂಗ|
ಕಟ್ಟಿಕೊಂಡೂ| ನಿಂತಾವ ಹರ್ಷಗೊಂಡು||

ಹಸಿರುಟ್ಟ ಬಸುರಿಯ ಹಾಂಗ|
ನೆಲಾ ಹೊಲಾ ಹ್ಯಾಂಗ|
ಅರಿಸಿನಾ ಒಡೆಧಾಂಗ|
ಹೊಮ್ಮತಾವ| ಬಂಗಾರ ಚಿಮ್ಮತಾವ||
ಗುಡ್ಡ ದುಡ್ಡ ಸ್ಥಾವರಲಿಂಗ|
ಅವಕ ಅಭ್ಯಂಗ|
ಎರಿತಾವನ್ನೊ ಹಾಂಗ|
ಕೂಡ್ಯಾವ ಮೋಡ| ಸುತ್ತೆಲ್ಲ ನೋಡ ನೋಡ||

ನಾಡೆಲ್ಲ ಏರಿಯ ವಾರಿ||
ಹರಿತಾವ ಝರಿ|
ಹಾಲಿನ ತೊರಿ|
ಈಗ ಯಾಕ| ನೆಲಕೆಲ್ಲ ಕುಡಿಸಲಾಕ||
ಶ್ರಾವಣಾ ಬಂತು.

ಜಗದ್ಗುರು ಹುಟ್ಟಿದ ಮಾಸ|
ಕಟ್ಟಿ ನೂರು ವೇಷ|
ಕೊಟ್ಟ ಸಂತೋಷ|
ಕುಣಿತದ ತಾನsದ ದಣಿತದ|

ಶ್ರಾವಣಾ ಬಂತು ಕಾಡಿಗೆ| ಬಂತು ನಾಡಿಗೆ|
ಬಂತು ಬೀಡಿಗೆ| ಶ್ರಾವಣಾ ಬಂತು||

                                                                   - ಅಂಬಿಕಾತನಯದತ್ತ

Download this song

ಯಾಕೆ ಬಡಿದಾಡ್ತಿ ತಮ್ಮ / Yaake badidaadti tamma

ಯಾಕೆ ಬಡಿದಾಡ್ತಿ ತಮ್ಮ ಮಾಯಾ ಮೆಚ್ಚಿ ಸಂಸಾರ ನೆಚ್ಚಿ.
ನೀ ಹೋಗೊದರಿಯೇ ತಮ್ಮ ಕಣ್ಣ ಮುಚ್ಚಿ ಮಣ್ಣ ಮುಚ್ಚಿ.

ಹೆಂಡ್ರು ಮಕ್ಳಿರುವರು ತಮ್ಮ ಎಲ್ಲಿ ತನಕ?
ಇದ್ರೆ ತಿಂಬೋ ತನಕ.
ಸತ್ತಾಗ ಬರುವರು ತಮ್ಮ ಗುಳಿ ತನಕ,
ಮಣ್ಣು ಮುಚ್ಚೋ ತನಕ ಮಣ್ಣು ಮುಚ್ಚೋ ತನಕ.

ಅಣ್ಣ ತಮ್ಮ ಅಕ್ಕ ತಂಗಿ ಎಲ್ಲೀ ತನಕ?
ಬದುಕೀ ಬೆಳೆಯೋ ತನಕ.
ಸತ್ತಾಗ ಬರುವರು ತಮ್ಮ ಗುಳಿ ತನಕ,
ಮಣ್ಣು ಮುಚ್ಚೋ ತನಕ.

ಹೆಣ್ಣು ಹೊನ್ನು ಮಣ್ಣು ನಿನ್ನದು ಎಲ್ಲೀ ತನಕ?
ನಿನ್ನ ಕೊರಳಿಗೆ ಕುಣಿಕೆ ಬೀಳೋ ತನಕ,
ನಿನ್ನಾಸೆ ಪ್ರಾಣಪಕ್ಷಿ ಹಾರೋತನಕ.
ಕಳಚಯ್ಯ ಮಾಯದ ಪೊರೆಯ ಮುಕ್ತಿ ಹೊಂದಾಕ.


* ಬಹುಶಃ ಇದೊಂದು ಜನಪದ ಗೀತೆ. ಆದರೆ, ಅಶ್ವಥ್ ರ ಧ್ವನಿಯಲ್ಲಿ ಈ ಹಾಡನ್ನು ಕೇಳಿದಾಗ, ನನ್ನ ಭಾವಗೀತಾಗುಚ್ಛದಲ್ಲಿ ಈ ಹೂವನ್ನು ಪೋಣಿಸಲೇ ಬೇಕೆನಿಸಿತು.

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ / Innu yaka baralillavva hubballiyava

ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವ
ವಾರದಾಗ ಮೂರುಸರತಿ ಬಂದು ಹೋದಂವಾ...

ಭಾರಿ ಜರದ ವಾರಿ ರುಮ್ಮಾಲ ಸುತ್ತಿಕೊಂಡಂವಾ
ತುಂಬ-ಮೀಸಿ ತೀಡಿಕೋತ ಹುಬ್ಬು ಹಾರಸಾಂವಾ
ಮಾತುಮಾತಿಗೆ ನಕ್ಕುನಗಿಸಿ ಆಡಿಸ್ಯಾಡಾಂವಾ
ಏನೋ ಅಂದರ ಏನೋ ಕಟ್ಟಿ ಹಾsಡಾ ಹಾಡಂವಾ
                                                                               ಇನ್ನೂ ಯಾಕ ಬರಲಿಲ್ಲ ....

ತಾಳೀಮಣಿಗೆ ಬ್ಯಾಳಿಮಣಿ ನಿನಗೆ ಬೇಕೇದಾಂವಾ
ಬಂಗಾರ-ಹುಡೀಲೇ ಭಂಡಾರನ ಬೆಳೆಸೇನಂದಾಂವಾ
ಕಸಬೇರ ಕಳೆದು ಬಸವೇರ ಬಿಟ್ಟು ದಾಟಿ ಬಂದಾಂವಾ
ಜೋಗತೇರಿಗೆ ಮೂಗುತಿ ಅಂತ ನನsಗ ಅಂದಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

ಇರು ಅಂದರ ಬರತೇನಂತ ಎದ್ದು ಹೊರಡಾಂವಾ
ಮಾರೀ ತೆಳಗ ಹಾಕಿತೆಂದರೆ ಇದ್ದು ಬಿಡಾಂವಾ
ಹಿಡಿ ಹೀಡೀಲೆ ರೊಕ್ಕಾ ತೆಗದು ಹಿಡಿ ಹಿಡಿ ಅನ್ನಾಂವಾ
ಖರೆ ಅಂತ ಕೈಮಾಡಿದರ ಹಿಡs; ಬಿಡಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ
ಚೌಡಿಯಲ್ಲ ನೀ ಚೂಡಾಮಣಿಯಂತ ರಮಿsಸ ಬಂದಾಂವಾ
ಬೆರಳಿಗುಂಗುರಾ ಮೂಗಿನಾಗ ಮೂಗುಬಟ್ಟಿಟ್ಟಾಂವಾ
ಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

ಹುಟ್ಟಾಯಾಂವಾ ನಗಿಕ್ಯಾದಿಗೀ ಮೂಡಸಿಕೊಂದಾಂವಾ
ಕಂಡ ಹೆಣ್ಣಿಲೆ ಪ್ರೀತಿ ವೀಳ್ಯ ಮಡಿಚಿಕೊಂದಾಂವಾ
ಜಲ್ಮಕ ಜಲ್ಮಕ ಗೆಣ್ಯಾ ಆಗಿ ಬರತೇನೆಂದಾಂವಾ
ಎದಿಮ್ಯಾಗಿನ ಗೆಣತಿನ ಮಾಡಿ ಇಟ್ಟಕೊಂಡಾಂವಾ
                                                                               ಇನ್ನೂ ಯಾಕ ಬರಲಿಲ್ಲ....

ಸೆಟ್ಟರ ಹುಡುಗ ಸೆಟಗೊಂಢೋದಾ ಅಂತ ನನ್ನ ಜೀಂವಾ
ಹಾದೀಬೀದಿ ಹುಡುಕುತೈತ್ರೆ ಬಿಟ್ಟ ಎಲ್ಲ ಹ್ಯಾಂವಾ
ಎಲ್ಲೀ! ಮಲ್ಲೀ! ಪಾರೀ! ತಾರೀ! ನೋಡೀರೇನವ್ವಾ
ನಿಂಗೀ! ಸಂಗೀ! ಸಾವಂತರೀ! ಎಲ್ಲಾನ ನನ್ನಾಂವಾ
                                                                               ಇನ್ನೂ ಯಾಕ ಬರಲಿಲ್ಲ ....

                                                                     
                                                                                                            - ಅಂಬಿಕಾತನಯದತ್ತ 

ನನ್ನವಳು ನನ್ನೆದೆಯ ಹೊನ್ನಾಡನಾಳುವಳು / Nannavalu nannedeya honnadanaaluvalu

ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ||ಪ||

ಹೊಳೆಯ ಸುಳಿಗಳಿಗಿಂತ ಆಳಗಣ್ಣಿನ ಚೆಲುವು
ಅವಳೊಮ್ಮೆ ಹೆರಳ ಕೆದರಿ ಕಪ್ಪುಗುರುಳನ್ನು
ಬೆನ್ನ ಮೇಲೆಲ್ಲ ಹರಡಿದರೆ…
ದೂರದಲಿ, ಗಿರಿಯ ಮೇಲೆ ಇಳಿದಂತೆ ಇರುಳ ಮಾಲೆ
ಇಳಿದಂತೆ ಇರುಳ ಮಾಲೆ.

ಕರೆದಾಗ ತೌರು ಮನೆ, ನೆನೆದಾಗ ನನ್ನ ಮನೆ
ಹಳ್ಳಿಯೆರಡರ ಮುದ್ದು ಬಳ್ಳಿ ಅವಳು
ಮುಚ್ಚು ಮರೆ ಇಲ್ಲದೆ ಅಚ್ಚ ಮಲ್ಲಿಗೆಯಂತೆ
ಅರಳುತಿಹುದು ಅವಳ ಬದುಕು
ಬಂಗಾರದೊಡವೆಗಳ ಬಯಸಿಲ್ಲ ಮನಸಿನಲಿ
ಬಂಗಾರದಂತ ಹುಡುಗಿ
ನನ್ನೊಡವೆ, ನನ್ನ ಬೆಡಗಿ.

ಹಸಿರು ಸೀರೆಯನುಟ್ಟು, ಕೆಂಪು ಬಳೆಗಳ ತೊಟ್ಟು
ತುಂಬು ದನಿಯಲಿ ಕರೆವಳೆನ್ನ ಚೆಲುವೆ
ಹಣೆಯನಾಳುವುದು ಅವಳ ಕುಂಕುಮದ ನಿಡುವಟ್ಟು
ಲಕ್ಷ್ಮಿ ಅವಳೆನ್ನ ಮನೆಗೆ
ನಮಗಿದುವೇ ಸೊಗಸು ಬದುಕಿನ ಬಣ್ಣಗಳಾ ಸಂತೆ
ನಮಗಿಲ್ಲ ನೂರು ಚಿಂತೆ,ನಾವು ಗಂಧರ್ವರಂತೆ
ನಾವು ಗಂಧರ್ವರಂತೆ.

                                                                          - ಕೆ. ಎಸ್. ನರಸಿಂಹ ಸ್ವಾಮಿ 

* ಕೆ.ಎಸ್.ನ ಅವರ ಇರುವಂತಿಗೆ ಕವನಸಂಕಲನದ ಒಂದು ಮಾರ್ದವತೆ ತುಂಬಿದ ಕವನ. 1968 ರಲ್ಲಿ ಬಂದ ಸರ್ವಮಂಗಳ ಚಿತ್ರಕ್ಕೆ ಬಳಕೆಯಾಗಿದೆ.

ಮನದ ಹಂಬಲದ / Manada Hambalada



ಮನದ ಹಂಬಲದ ಕನಸೆಲ್ಲವೂ
ಮಂಜಂತೆ ಕರಗಿ ಮರೆಯಾಯಿತೆ.

ಸೆಲೆ ಬತ್ತಿತೆ ಪ್ರೀತಿಯ ಹೊಳೆ
ಜೊಳ್ಳಾಯಿತೆ ಸ್ನೇಹದ ಬೆಳೆ
ಏಕಾಂತವೇ ಬಾಳಿನ ನೆಲೆ
ಮನಸು ವಿಷಾದಕೆ ಸೆರೆಯಾಯಿತೆ

ಎರಗಿ ಬಿರುಗಾಳಿ, ಬಡಿದು ಸಿಡಿಲು
ನಡುಗಡಲಿನಲ್ಲಿ ಒಡೆದ ಹಡಗು
ನೆರವಿರದೆ ಸೋತು, ತೇಲು ಮುಳುಗು
ಬದುಕು ಹತಾಶೆಗೆ ವಶವಾಯಿತೆ.

ಬಾಳಿಗುಂಟೆ ಮರುವಸಂತ
ಪಯಣಕುಂಟೆ ಹೊಸ ದಿಗಂತ
ಬೆಳಕು ಮೂಡೀತೆ ಇರುಳು ಕಳೆದು
ಹೊಸ ಅಂಕಕಾಗಿ ತೆರೆ ಸರಿವುದೆ.

                                        - ಬಿ. ಆರ್. ಲಕ್ಷ್ಮಣರಾವ್

Saturday 8 September 2012

ಬಾ, ಮಳೆಯೇ ಬಾ / Baa maleye baa



ಬಾ, ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ
ನಲ್ಲೆ, ಹಿಂತಿರುಗಿ ಹೋಗದಂತೆ

ಓಡು, ಕಾಲವೇ,ಓಡು, ಬೇಗ ಕವಿಯಲಿ ಇರುಳು
ಕಾದಿಹಳು ಅಭಿಸಾರಿಕೆ
ಅವಳಿಲ್ಲಿ ಬಂದೊಡನೆ ನಿಲ್ಲು, ಕಾಲವೇ ನಿಲ್ಲು
ತೆಕ್ಕೆ ಸಡಿಲಾಗದಂತೆ
ನಮ್ಮ ತೆಕ್ಕೆ ಸಡಿಲಾಗದಂತೆ

ಬೀಸು ಗಾಳಿಯೇ ಬೀಸು, ನನ್ನೆದೆಯ ಆಸೆಗಳ
ನಲ್ಲೆ ಹೃದಯಕ್ಕೆ ತಲುಪಿಸು
ಹಾಸು ಹೂಗಳ ಹಾಸು, ಅವಳು ಬಹ ದಾರಿಯಲ್ಲಿ
ಕಲ್ಲುಗಳು ತಾಗದಂತೆ
ಪಾದ ಕಲ್ಲುಗಳು ತಾಗದಂತೆ.

ಬೀರು, ದೀಪವೇ, ಬೀರು, ನಿನ್ನ ಹೊಂಬಳಕಲ್ಲಿ
ನೋಡುವೆನು ನಲ್ಲೆ ರೂಪ
ಆರು, ಬೇಗನೆ ಆರು, ಶೃಂಗಾರ ಶಯ್ಯೆಯಲಿ
ನಾಚಿ ನೀರಾಗದಂತೆ
ನಲ್ಲೆ ನಾಚಿ ನೀರಾಗದಂತೆ

ಹೋಗು, ನಿದ್ದೆಯೇ, ಹೋಗು, ನಿನಗಿಲ್ಲಿ ಎಡೆಯಿಲ್ಲಿ
ಪ್ರೇಮಿಗಳ ಸೀಮೆಯಲ್ಲಿ;
ನಾವೀಗ ಅನಿಮಿಷರು, ನಮ್ಮ ಮಿಲನ
ಗಂಧರ್ವ ವೈಭೋಗದಂತೆ
ಮಿಲನ, ಗಂಧರ್ವ ವೈಭೋಗದಂತೆ.

                                                                      - ಬಿ. ಆರ್. ಲಕ್ಷ್ಮಣರಾವ್

Download this song 

Monday 3 September 2012

ನೀ ಹೀಂಗ ನೋಡಬ್ಯಾಡ ನನ್ನ / Nee hinga nodabyada nanna

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ.

ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?

ತಂಬಲs ಹಾಕದ ತುಂಬ ಕೆಂಪು ಗಿಡಗಡಕಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆsನಗ ಇಲ್ಲದ ಭೀತಿ

ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ

                                                                                       - ಅಂಬಿಕಾತನಯದತ್ತ 

ಅನಂತ ಪ್ರಣಯ (ಉತ್ತರಧ್ರುವದಿಂ, ದಕ್ಷಿಣಧ್ರುವಕೂ) / Uttara dhruvadim, dakshina dhruvaku

ಉತ್ತರಧ್ರುವದಿಂ, ದಕ್ಷಿಣಧ್ರುವಕೂ,
ಚುಂಬಕ ಗಾಳಿಯು ಬೀಸುತಿದೆ 
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಜಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸೆಯಿಸಿತು
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು. 

ಅಕ್ಷಿನಿಮೀಲನ ಮಾಡದೆ ನಕ್ಷ- 
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರದಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

                                                      - ಅಂಬಿಕಾತನಯದತ್ತ  

ಬಾರೊ ಸಾಧನಕೇರಿಗೆ / Baaro Saashana kerige

ಬಾರೊ ಸಾಧನಕೇರಿಗೆ,
ಮರಳಿ ನಿನ್ನೀ ಊರಿಗೆ....

ಮಳೆಯು ಎಳೆಯುವ ತೇರಿಗೆ
ಹಸಿರು ಏರಿದೆ ಏರಿಗೆ
ಹಸಿರು ಸೇರಿದೆ ಊರಿಗೆ
ಹಸಿರು ಚಾಚಿದೆ ದಾರಿಗೆ
ನಂದನದ ತುಣುಕೊಂದು ಬಿದ್ದಿದೆ
ನೋಟ ಸೇರದು ಯಾರಿಗೆ?

ಮಲೆಯ ಮೊಗವೇ ಹೊರಳಿದೆ,
ಕೋಕಿಲಕೆ ಸವಿ ಕೊರಳಿದೆ,
ಬೇಲಿಗೂ ಹೂ ಬೆರಳಿದೆ,
ನೆಲಕೆ ಹರೆಯವು ಮರಳಿದೆ.
ಭೂಮಿತಾಯ್ ಒಡಮುರಿದು ಎದ್ದಳೊ,
ಶ್ರಾವಣದ ಸಿರಿ ಬರಲಿದೆ.

ಮೋಡಗಳ ನೆರಳಾಟವು,
ಅಡವಿ ಹೂಗಳ ಕೂಟವು,
ಕೋಟಿ ಜೆನ್ನೊಣಕೂಟವು,
ಯಕ್ಷಿ ಮಾಡಿದ ಮಾಟವು.
ನೋಡು ಬಾ ಗುಂಪಾಗಿ ಪಾತರ-
ಗಿತ್ತಿ ಕುಣಿಯುವ ತೋಟವು.

ಮರವು ಮುಗಿಲಿಗೆ ನೀಡಿದೆ.
ಗಿಡದ ಹೊದರೊಳು ಹಾಡಿದೆ
ಗಾಳಿ ಎಲ್ಲೂ ಆಡಿದೆ
ದುಗುಡ ಇಲ್ಲಿಂದೋಡಿದೆ
ಹೇಳು ಗೆಳೆಯಾ ಬೇರೆ ಎಲ್ಲೀ
ತರದ ನೋಟವ ನೋಡಿದೆ?

                                                    - ಅಂಬಿಕಾತನಯದತ್ತ